National Anti Corruption NEWS CHANNEL Mallikarjuna Raju Karnataka State Bureau Chief

0
316

“ಶಾಂತವೇರಿ ಗೋಪಾಲಗೌಡ ಪುಣ್ಯ ಸ್ಮರಣೆ”

ಜನನ : 14/3/1923
ನಿಧನ : 9/6/1972

ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯ. ಗಳನ್ನು ವ್ಯಕ್ತಪಡಿಸುವುದು ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಹೇಳುವುದರಲ್ಲಿ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ. ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತ ವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು.

ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲ ಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿದೆ. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು.

ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ – ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು.

ಬಡತನದ ಕುಟುಂಬ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿ ನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಇಸವಿ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕರು.

ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯ ನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆ.

ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು.

ದನಕಾಯುವ ಹುಡುಗನ ವಿದ್ಯಾಭ್ಯಾಸ ನಿಲ್ಲಿಸಬೇಡಿ

ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯ ನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು.

ಗೋಪಾಲಗೌಡರು ದನಕಾಯುವ ಕಾಯಕ ದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ. ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು….’ ಎಂದು ಸಲಹೆ ಮಾಡಿ ಹೊರಟು ಹೋದರಂತೆ.

ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು.

ಸಮಾಜವಾದಕ್ಕೆ

ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನೂ, ಕೆಚ್ಚನ್ನೂ ತುಂಬಿಕೊಂಡಿದ್ದ ಶಾಂತವೇರಿ ಗೋಪಾಲಗೌಡರನ್ನು ಮೈಸೂರು ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕೀಯ ರಂಗ ಕೈಬೀಸಿ ಕರೆಯಿತು. ಅದರಿಂದ ಅವರು ಆಕರ್ಷಿತರಾದರು.

೧೯೪೭ರ ಸ್ವತಂತ್ರ ಭಾರತ ಚುರುಕಾದ ರಾಜಕೀಯ ಚಟುವಟಿಕೆಗಳನ್ನು ಕಂಡುಕೊಂಡಿತು. ಎಲ್ಲ ಪಕ್ಷಗಳವರೂ ಚುರುಕಾದಂತೆ ಸಮಾಜವಾದಿಗಳು ಸಹ ತೀವ್ರ ಚಟುವಟಿಕೆಯಲ್ಲಿ ತೊಡಗಿದರು. (ಸಮಾಜವಾದಿಗಳು ದೇಶದ ಸಂಪತ್ತೆಲ್ಲ ಸಮಾಜಕ್ಕೆ ಸೇರಿದ್ದು; ಮುಖ್ಯ ಉತ್ಪಾದನೆಗಳನ್ನು ಮಾಡುವ ಉದ್ಯಮಗಳು ಸರ್ಕಾರದ ಕೈಯಲ್ಲಿರಬೇಕು. ಅವುಗಳ ಪ್ರಯೋಜನ, ಲಾಭ ಇಡೀ ಸಮಾಜಕ್ಕೆ ದೊರಕಬೇಕು ಎಂದು ಪ್ರತಿಪಾದಿಸುತ್ತಾರೆ). ಜಯಪ್ರಕಾಶ ನಾರಾಯಣ್, ಡಾಕ್ಟರ್ ರಾಮಮನೋಹರ ಲೋಹಿಯಾ ಮೊದಲಾದವರು ಸಮಾಜವಾದದ ಹಿರಿಯ ನಾಯಕರು. ಅವರು ದೇಶದಾದ್ಯಂತ ಸಂಚಾರ ಮಾಡಿದರು; ಕರ್ನಾಟಕಕ್ಕೂ ಬಂದರು. ಸಮಾಜ ಪ್ರಜ್ಞೆಯ ತರುಣ ಸಮೂಹವನ್ನು ತಮ್ಮ ವಿಚಾರಧಾರೆಯತ್ತ ಸೆಳೆದರು. ಹಾಗೆ ಸೆಳೆಯಲ್ಪಟ್ಟವರಲ್ಲಿ ಗೋಪಾಲಗೌಡರೂ ಒಬ್ಬರು. ಆ ವೇಳೆಗಾಗಲೇ ರಾಜ್ಯದ ಅನೇಕ ಗಣ್ಯ ರಾಜಕೀಯ ಮುಖಂಡರ ಸಂಪರ್ಕವನ್ನು ಬೆಳೆಸಿಕೊಂಡು ಅವರು ಸಂಪೂರ್ಣ ವಾಗಿ ರಾಜಕೀಯ ರಂಗಕ್ಕೆ ಧುಮುಕಿದರು.

ರೈತರು ದೀನದಲಿತರಿಗಾಗಿ

ಸಮಾಜವಾದದ ಸೆಳೆತಕ್ಕೆ ಸಿಕ್ಕಿ ಶಾಂತವೇರಿ ಯವರು ಸಹಜವಾಗಿಯೇ ರೈತರ, ದೀನದಲಿತರ ಸ್ಥಿತಿ ಗತಿಯ ಕಡೆಗೆ ಗಮನ ಹರಿಸಿದರು. ತೀರ್ಥಹಳ್ಳಿ ಮತ್ತು ಸಾಗರ ಪ್ರದೇಶದ ರೈತರ ಸಂಘಟನೆಯಲ್ಲಿ ತೊಡಗಿದುದು ಆಗಲೇ. ಆ ವೇಳೆಗಾಗಲೇ ತೀರ್ಥಹಳ್ಳಿಯಲ್ಲಿ ಮಲೆನಾಡು ಗೇಣಿದಾರರ ಸಂಘವು, ಸಾಗರದಲ್ಲಿ ರೈತ ಸಂಘವು ಅಸ್ತಿತ್ವಕ್ಕೆ ಬಂದಿದ್ದವು. ಸಮಾಜವಾದಿ ಪಕ್ಷದ ‘ಹಿಂದ್ ಕಿಸಾನ್ ಪಂಚಾಯಿತಿ’ ಯಲ್ಲಿ ಈ ಸಂಘಗಳನ್ನು ವಿಲೀನಗೊಳಿಸಿ ೧೯೪೮ರಲ್ಲಿ ತೀರ್ಥಹಳ್ಳಿಯಲ್ಲಿ ದೊಡ್ಡ ರೈತ ಸಮ್ಮೇಳನವನ್ನೇ ನಡೆಸಿದರು. ತಮ್ಮ ಸಂಘಟನಾಚಾತುರ್ಯವನ್ನು ತೋರಿಸಿಕೊಟ್ಟರು. ಅಂದಿನ ಆ ಸಮ್ಮೇಳನಕ್ಕೆ ಅಖಿಲ ಭಾರತ ಶ್ರೇಣಿಯಲ್ಲಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ, ರಮಾನಂದನ ಮಿಶ್ರ ಮೊದಲಾದ ಹಿರಿಯರನ್ನು ಆಹ್ವಾನಿಸಿದ್ದರು. ಅಂದಿನಿಂದ ಗೋಪಾಲಗೌಡರ ಹೆಸರು ಅಖಿಲ ಭಾರತ ಮಟ್ಟದ ಸಮಾಜವಾದಿ ನಾಯಕರಿಗೆ ಪರಿಚಯವಾಯಿತು; ಅವರ ಜತೆ ನಿಕಟ ಸಂಪರ್ಕ ಬೆಳೆಯಿತು. ಡಾಕ್ಟರ್ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೊಳಗಾದ ಅವರು ಹೊಸ ಹುರುಪನ್ನೇ ತಳೆದರು; ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರೆಂಬುದು ಗಮನಿಸಬೇಕಾದ ಅಂಶ.

ಕಾಗೋಡು ಸತ್ಯಾಗ್ರಹ

ರೈತ ಸಂಘಟನೆಯಲ್ಲಿ ಹೆಚ್ಚು ಒಲವು ತೋರಿಸಿದ ಗೌಡರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ರೂಪುಗೊಂಡ, ಕಾಗೋಡು ರೈತ ಸತ್ಯಾಗ್ರಹವನ್ನು ನಡೆಸಿದರು. ಕಾಗೋಡು ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿ. ಅಲ್ಲಿ ರೈತರು ಜಮೀನ್ದಾರರ ಅನ್ಯಾಯಗಳನ್ನು ಪ್ರತಿಭಟಿಸಿದರು. ಜಮೀನ್ದಾರರಿಗಾಗಿ ದುಡಿದು ಅದರ ಲಾಭವನ್ನೆಲ್ಲ ಅವರಿಗೊಪ್ಪಿಸಿ ಅವರ ದಯೆಯಿಂದ ರೈತರು ಬಾಳುವಂತಾಗಿತ್ತು. ಧಾನ್ಯ ಒಪ್ಪಿಸುವಾಗ ಬಳಸುವ ಅಳತೆ ಕೂಡ, ನ್ಯಾಯವೋ ಅಲ್ಲವೋ, ಜಮೀನ್ದಾರರು ಹೇಳಿದಂತೆ ಆಗಬೇಕಾಗಿತ್ತು. ಎಷ್ಟೋ ಮಂದಿ ಜೀತದಾಳುಗಳಾಗಿದ್ದರು. ಗಂಡಸರು ಮೊಣಕಾಲಿನಿಂದ ಮೇಲೆ ಪಂಚೆ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡಕೂಡದು. ಇಂತಹ ನಿರ್ಬಂಧಗಳು. ರೈತರು ತಿರುಗಿಬಿದ್ದರು. ಅದು ಗೋಪಾಲಗೌಡರ ಸತ್ವಪರೀಕ್ಷೆಯ ಘಟನೆಯಾಯಿತು. ಜಮೀನ್ದಾರರು ರೈತರನ್ನು ಗೇಣಿಯಿಂದ ತೆಗೆದು ಹಾಕಿದರು. ಸಮಾಜವಾದಿ ಪಕ್ಷದವರ ನಾಯಕತ್ವದಲ್ಲಿ ರೈತರು ಗುಂಪುಗುಂಪಾಗಿ ಗದ್ದೆಗಿಳಿದರು. ಪೊಲೀಸರು ತಡೆದು ದಸ್ತಗಿರಿ ಮಾಡಿದರು. ಸತ್ಯಾಗ್ರಹದಲ್ಲಿ ಗೌಡರು ‘ಸೈ’ ಎನಿಸಿಕೊಂಡರು. ೧೯೫೧ರಲ್ಲಿ ನಡೆದ ಆ ಸತ್ಯಾಗ್ರಹಕ್ಕೆ ಡಾಕ್ಟರ್ ಲೋಹಿಯಾ ಅವರೂ ಬಂದಿದ್ದರು. ಸತ್ಯಾಗ್ರಹ ನಡೆಸಿ ಕಾರಾಗೃಹ ಸೇರಿದರು. ಹೆಸರಾಂತ ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಅನೇಕಮಂದಿ ಪ್ರಭಾವೀ ತರುಣರು ಸಮಾಜವಾದದತ್ತ ತಿರುಗಿದರು. ಮುಂದೆ ಪ್ರಮುಖ ವ್ಯಕ್ತಿಗಳಾಗಿ ರೂಪುಗೊಂಡರು.

ಕಾಗೋಡು ಸತ್ಯಾಗ್ರಹವನ್ನು ಯಶಸ್ವಿಯಾಗಿ ನಡೆಸಿದ ಗೋಪಾಲಗೌಡರು ‘ಹಿಂದ್ ಕಿಸಾನ್ ಪಂಚಾಯತಿ’ಯ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ನಿಯೋಜಿತರಾದರು.

ವಿಧಾನಸಭೆಯಲ್ಲಿ

೧೯೫೨ರ ವೇಳೆಗೆ ಜನಪ್ರಿಯ ತರುಣ ನಾಯಕರಾಗಿ ಬೆಳೆದ ಗೋಪಾಲಗೌಡರು ಪ್ರಥಮ ಮಹಾಚುನಾವಣೆಯಲ್ಲಿ ಗೆದ್ದು ಮೈಸೂರು ವಿಧಾನಸಭೆಯ ಸದಸ್ಯರಾದರು. ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿ ಸದಾ ಸುದ್ದಿ ಯಲ್ಲಿರುತ್ತಿದ್ದರು. ಸತ್ಯ ಪ್ರತಿಪಾದನೆಯಲ್ಲಿ ಎತ್ತಿದ ಕೈ! ಅನ್ಯಾಯವನ್ನು ಸಹಿಸುವ ಜಾಯಮಾನ ಅವರದಲ್ಲ. ವಿಧಾನಸಭೆಯಲ್ಲಿ ನಿಷ್ಠುರವಾದಿಗಳ ಅಗ್ರ ಪಂಕ್ತಿಯಲ್ಲಿದ್ದರು.

ಗೋಪಾಲಗೌಡರು ವಿಧಾನಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳ ಪ್ರತಿಪಾದಕರಾಗಿದ್ದರು. ಗಂಡಭೇರುಂಡ ಹಿಂದಿನ ಮೈಸೂರು ರಾಜಮನೆತನದ ಲಾಂಛನ. ರಾಜತ್ವವನ್ನು ಗೋಪಾಲಗೌಡರು ವಿರೋಧಿಸುತ್ತಿದ್ದರು. ಅಠಾರ ಕಛೇರಿ ಮೇಲಿನ ಗಂಡಭೇರುಂಡ ಧ್ವಜವನ್ನು ಕೆಳಗಿಳಿಸುವ ನಿರ್ಣಯ ತಂದರು. ಕರ್ನಾಟಕ ಏಕೀಕರಣಕ್ಕೆ ಬೆಂಬಲ ನೀಡುವ, ಕೋಲಾರದ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡುವ, ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಇವೇ ಮೊದಲಾದ ನಿರ್ಣಯಗಳ ಪ್ರತಿಪಾದಕರಾದರು.

ಭೂಸುಧಾರಣೆಗೆ ನಾಂದಿಯಾದ ಗೇಣಿ ಶಾಸನ ಮತ್ತು ಇನಾಂ ರದ್ದತಿ ಶಾಸನಗಳ ಬಗೆಗೆ ಜನಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾದರು.

ಅಖಂಡ ಕರ್ನಾಟಕಕ್ಕಾಗಿ

ಗೋಪಾಲಗೌಡರು ಕಟ್ಟಾ ಕರ್ನಾಟಕ ವಾದಿಗಳು. ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದುಗೂಡಬೇಕೆಂಬುದು ಅವರ ಉತ್ಕಟೇಚ್ಛೆ ಯಾಗಿತ್ತು. ಇದರ ಸಾಧನೆಯಲ್ಲಿ ತೊಡಗಿದ್ದ ಹಿರಿಯರಿಗೆ ಪರಿಪೂರ್ಣ ಬೆಂಬಲ ನೀಡಿದರು. ಏಕೀಕರಣಕ್ಕೆ ಸಂಬಂಧಿಸಿದ ಯಾವುದೇ ಸಭೆ ಸಮ್ಮೇಳನಗಳಲ್ಲಿ ಮುಂಚೂಣಿಯಾಗಿ ನಿಲ್ಲುವುದು ಅವರ ಸ್ವಭಾವ. ಏಕೀಕರಣದ ಪರ ಮತ್ತು ವಿರೋಧಿ ಬಣಗಳ ನಡುವೆ ಕೊಂಡಿಯಂತೆ ಕೆಲಸ ಮಾಡಿದವ ರವರು. ಏಕೀಕರಣವಾಗದ ಹೊರತು, ಕನ್ನಡಿಗರ ಹಾಗೂ ಕನ್ನಡದ ಉದ್ಧಾರ ಸಾಧ್ಯವಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ರಾಜ್ಯ ಪುನರ್ ವಿಂಗಡಣೆಯ ನಿರ್ಧಾರಕ್ಕಾಗಿ ಭಾರತ ಸರ್ಕಾರ ನೇಮಿಸಿದ ಫಜಲ್ ಅಲಿ ಆಯೋಗವು ಕರ್ನಾಟಕಕ್ಕೆ ಭೇಟಿ ಇತ್ತಾಗ, ಕನ್ನಡಿಗರ ಪರ ವಾದವನ್ನು ಮಂಡಿಸಿದ ಪ್ರಮುಖರಲ್ಲಿ ಅವರೂ ಒಬ್ಬರು. ಗೋಪಾಲಗೌಡರು ಶಾಸಕರಾಗಿದ್ದಾಗಲೇ, ೧೯೫೬ರ ನವೆಂಬರ್ ಒಂದರಂದು ಕರ್ನಾಟಕ ಏಕೀಕರಣವಾಯಿತು.

೧೯೫೭ರ ಮಹಾಚುನಾವಣೆಯಲ್ಲಿ ಗೋಪಾಲಗೌಡರು ಸೋತರು. ಆದರೆ, ರಾಜಕೀಯ ವಾಗಿ ಹಿಂದೆ ಬೀಳಲಿಲ್ಲ. ಕರ್ನಾಟಕದಲ್ಲಿ ರಾಮಮನೋಹರ ಲೋಹಿಯಾ ಸಮಾಜವಾದಿ ಪಕ್ಷವನ್ನು ಸಂಘಟಿಸುವುದರಲ್ಲಿ ನಿರತರಾದರು. ಆ ಮೂಲಕ ಸಮಾಜದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ತೊಡಗಿದರು. ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಆಗಾಗ ಚಳುವಳಿ, ಸತ್ಯಾಗ್ರಹಗಳನ್ನು ನಡೆಸಿದರು. ಸೆರೆಮನೆವಾಸಗಳನ್ನು ಅನುಭವಿಸಿದರು.

ಮತ್ತೆ ೧೯೬೨ರ ಮಹಾಚುನಾವಣೆಯಲ್ಲಿ ವಿಜಯ ಸಾಧಿಸಿ, ಹೆಚ್ಚು ಪುಷ್ಟಿಯುತರಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ಅಂದಿನಿಂದ ೧೯೭೨ ರ ವರೆಗೆ ವಿಧಾನಸಭಾ ಸದಸ್ಯರಾಗಿದ್ದು, ಒಂದು ಬಗೆಯ ಇತಿಹಾಸವನ್ನೇ ನಿರ್ಮಿಸಿದರು. ೧೯೭೨ರಲ್ಲಿ ಆರೋಗ್ಯ ಇಳಿಮುಖವಾಗುವವರೆಗೆ ರಾಜಕೀಯ ರಂಗದ ಮೂಲಕ ಸಮಾಜ ಸೇವೆಯನ್ನು ನಿಷ್ಠೆಯಿಂದ ಮಾಡಿದರು. ೧೯೭೨ರಲ್ಲಿ ತಮ್ಮ ಸ್ಪರ್ಧಾಕ್ಷೇತ್ರವನ್ನು (ತೀರ್ಥಹಳ್ಳಿ) ಕೋಣಂದೂರು ಲಿಂಗಪ್ಪನವರಿಗೆ ಬಿಟ್ಟುಕೊಟ್ಟು ಆಶೀರ್ವಾದ ಮಾಡಿದರು.

ಕುಟುಂಬ ಜೀವನ

ಗೋಪಾಲಗೌಡರ ಮದುವೆಯಾದುದು ೧೯೬೪ರಲ್ಲಿ. ಧಾರವಾಡದ ಪ್ರಸಿದ್ಧ ವಕೀಲರೂ ಸಮಾಜಸೇವಕರೂ ವಿಚಾರವಾದಿಗಳೂ ಆದ ದೇವನಗೌಡ ಲಿಂಗನಗೌಡ ಪಾಟೀಲರ ಮಗಳು ಸೋನಕ್ಕ ಇವರ ಮಡದಿಯಾದರು. ಗೋಪಾಲಗೌಡ ದಂಪತಿಗಳಿಗೆ ಇಬ್ಬರೇ ಮಕ್ಕಳು. ಮಗಳು ಇಳಾಗೀತ ೧೯೬೭ರ ಮಾರ್ಚ್ ತಿಂಗಳಲ್ಲಿ ಹುಟ್ಟಿದಳು; ಒಂದು ವರ್ಷ ಒಂದು ತಿಂಗಳ ನಂತರ, ಅಂದರೆ ೧೯೬೮ರ ಏಪ್ರಿಲ್‌ನಲ್ಲಿ ಅವರ ಮಗ ರಾಮಮನೋಹರ ಜನಿಸಿದ. ಬೆಂಗಳೂರು ನಗರದ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಉಪಾಧ್ಯಾಯನಿಯಾಗಿದ್ದ ಶ್ರೀಮತಿ ಸೋನಕ್ಕ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ.

ಗೋಪಾಲಗೌಡರು ತಮ್ಮ ಮಗಳಿಗೆ ‘ಇಳಾಗೀತ’ ಎಂದು ಹೆಸರಿಟ್ಟ ಪ್ರಸಂಗ ಬಹಳ ಮನೋಜ್ಞವಾಗಿದೆ. ಡಾಕ್ಟರ್ ವಿ.ಕೃ ಗೋಕಾಕ್ ಅವರ ‘ಇಳಾಗೀತ’ ಕಾವ್ಯವನ್ನು ಓದಿ, ಮೋಹಿತರಾಗಿದ್ದರಿಂದ ತಮ್ಮ ಮಗಳಿಗೆ ಅದೇ ಹೆಸರನ್ನಿಟ್ಟರಂತೆ. ಆಧುನಿಕ ಸಾಹಿತ್ಯ ಬೆಳವಣಿಗೆಯನ್ನು ಗೌಡರು ಎಷ್ಟೊಂದು ಗಾಢವಾಗಿ ಅವಲೋಕಿಸುತ್ತಿದ್ದರೆಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ.

ಗೋಪಾಲಗೌಡರು ದಾಂಪತ್ಯ ಜೀವನಕ್ಕೆ ಕಾಲಿಟ್ಟರಾದರೂ, ರಾಜಕೀಯ ಮತ್ತು ಸಾಮಾಜಿಕ ಕರ್ತವ್ಯಗಳ ಕರೆಯನ್ನು ಕಡೆಗಣಿಸಲು ಸಾಧ್ಯವಾಗಲಿಲ್ಲ. ದಾಂಪತ್ಯ ಜೀವನದ ಮೂರುನಾಲ್ಕು ವರ್ಷಗಳ ನಂತರ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೇ ಹೆಚ್ಚು ಕಾಲವನ್ನು ಗೌಡರು ಮೀಸಲಿರಿಸಿದ್ದರು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅದು ಕೆಡುತ್ತಾ ಬಂದಿತು. ಎಂಟು ವರ್ಷ ಗಳ ದಾಂಪತ್ಯ ಜೀವನ ನಡೆಸಿ, ರಾಷ್ಟ್ರಾಭಿವೃದ್ಧಿಯ ಚಿಂತನೆಯಲ್ಲಿಯೇ ೧೯೭೨ರಲ್ಲಿ ತೀರಿಕೊಂಡರು.

ಸಮಾಜದ ಚಿಂತನೆಯೇ ಉಸಿರು

ಗೋಪಾಲಗೌಡರಿಗೆ ಸಮಗ್ರ ಸಮಾಜದ ಚಿಂತನೆಯೇ ಜೀವನದ ಉಸಿರಾಗಿತ್ತು. ಸಣ್ಣಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡವರಲ್ಲ. ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಮೊದಲಾದ ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಜಾಗೃತಮನಸ್ಕರಾಗಿದ್ದ ಗೌಡರು, ದೀನದಲಿತರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಾನವ ಧರ್ಮದ ಜಾಗೃತಿಯ ಬಗ್ಗೆ ಹೃದಯ ತುಂಬಿದ ಕಾಳಜಿಯನ್ನು ಹೊಂದಿದ್ದರು.

ಒಮ್ಮೆ ವಿಧಾನಸಭೆಯಲ್ಲಿ ಮಾತನಾಡುತ್ತ ‘ನನ್ನ ದೃಷ್ಟಿ ಸಾಮಾನ್ಯವಾಗಿ ರಾಜಕೀಯ ದೃಷ್ಟಿ. ಸಮಾಜದಲ್ಲಿ ಹೆಚ್ಚಾಗಿ ಆರ್ಥಿಕ ಸಮಾನತೆ ಉಂಟಾಗಬೇಕು. ಸಮಾನತೆ ಇರಬೇಕು, ಸ್ವಾತಂತ್ರ್ಯ ಇರಬೇಕು ಎಂಬುದನ್ನೇ ಪ್ರಾಮುಖ್ಯವಾಗಿ ನೋಡುವವನು’ ಎಂದರು. ಮತ್ತೊಮ್ಮೆ ನಿಮ್ನವರ್ಗ ದವರನ್ನು ಕುರಿತು ಮಾತನಾಡುತ್ತ, ‘ಈ ಜನಾಂಗ ಶತಶತಮಾನಗ ಳಿಂದಲೂ ಕೆಳಗೆ ಒತ್ತಲ್ಪಟ್ಟಿದೆ. ನೂರಾರು ವರ್ಷಗಳಿಂದ ಈ ಜನಾಂಗ, ಇತರ ಜನಾಂಗಗಳವರ ಅಭಿವೃದ್ಧಿಗೆ ಕೊಟ್ಟಿರುವ ಸಾಲವನ್ನು ತೀರಿಸಲು ನಾವೆಲ್ಲರೂ ತೆರಬೇಕಾದ ಋಣ ಬಹಳವಾಗಿದೆ’ ಎಂದರು.

ವ್ಯಕ್ತಿತ್ವ , ಸೇವೆ

ಗೋಪಾಲಗೌಡರು ಕೆಲವೊಮ್ಮೆ ಸಿಟ್ಟು ಸೆಡವು ಗಳಿಂದ ಆವೃತ್ತರಾಗಿ, ಮೈಮರೆತು ನಡೆದುಕೊಳ್ಳುವಂತೆ ಕಂಡುಬಂದರೂ (ದೇಹದ ಸ್ಥಿತಿಯಿಂದಾಗಿ ಹಾಗಾಗು ತ್ತಿತ್ತೆಂಬುದು ಕೆಲವು ಆಪ್ತೇಷ್ಟರ ಅನಿಸಿಕೆ) ಅವರ ನಿಷ್ಠಾಪೂರ್ಣ ಸೇವೆಯ ಮುಂದೆ ಅಂತಹ ಕ್ಷಣಿಕ ಸಂದರ್ಭಗಳು ನಿಲ್ಲುತ್ತಿರಲಿಲ್ಲ. ಅವರು ಅನೇಕ ವಿಚಾರಗಳಲ್ಲಿ ಅನುಕರಣೀಯ ಶಾಸಕರಾಗಿ, ವಿಧಾನಸಭೆಯ ಕರ್ತವ್ಯ ನಿರೂಪಣೆಯ ಮಹತ್ವವನ್ನು ತೋರಿಸಿಕೊಟ್ಟರು.

ಅಧಿಕಾರಕ್ಕಾಗಿ ಎಂದೂ ಆಸೆಪಡದ ಗೌಡರು ಪ್ರಾಮಾಣಿಕವಾದ ಜೀವನಕ್ಕಾಗಿ ಅಪೇಕ್ಷೆಪಟ್ಟವರು. ಆತ್ಮಾಭಿಮಾನ ಅವರ ಆಸ್ತಿಯಾಗಿತ್ತು, ವ್ಯಕ್ತಿಜೀವನಕ್ಕೂ ಇದನ್ನೇ ಅಳತೆಗೋಲಾಗಿಸುವ ಆತುರ ಅವರದಾಗಿತ್ತು.

ಗೋಪಾಲಗೌಡರು ಹುಟ್ಟು ಧೀಮಂತ ರಾದ್ದರಿಂದ, ಯಾವ ಕ್ಷೇತ್ರದಲ್ಲಿ ಕಾಲಿಟ್ಟರೂ ಎತ್ತರಕ್ಕೆ ಬೆಳೆವ ಶಕ್ತಿಯುಳ್ಳವರಾಗಿದ್ದರು.ಅವರು ಸಾಹಿತ್ಯಕ್ಷೇತ್ರದಲ್ಲಿ ಪೂರ್ಣಪ್ರವೇಶ ಮಾಡಿದ್ದರೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದ್ದರೆಂಬುದರಲ್ಲಿ ಅನುಮಾನವಿಲ್ಲ. ಅವರ ಮೊದ ಮೊದಲ ಬರಹಗಳೂ ಅನಂತರದ ಭಾಷಣಗಳ ಭಾಷಾವೈಭವ ಈ ಅಭಿಪ್ರಾಯಕ್ಕೆ ಸಾಕ್ಷಿ ಯನ್ನೊದಗಿಸುತ್ತವೆ. ಅವರು ಕೆಲವು ಒಳ್ಳೆಯ ಕವನಗಳನ್ನು ರಚಿಸಿದ್ದರೆಂಬುದು ಕೆಲವರಿಗಾದರೂ ತಿಳಿದಿರುವ ಅಂಶ. ಚಲನಚಿತ್ರವೂ ಸಾಹಿತ್ಯದಷ್ಟೇ ಮಹತ್ವದ್ದೆಂದು ಭಾವಿಸಿಕೊಂಡಿದ್ದ ಗೌಡರು ಇದು ಸಮಾಜಕ್ಕೆ ಒಳ್ಳೆಯ ಮಾಧ್ಯಮ ವನ್ನೊದಗಿಸುತ್ತದೆಂದು ವಾದಿಸುತ್ತಿದ್ದರಲ್ಲದೆ, ಅನಂತಮೂರ್ತಿಯವರ ಸಂಸ್ಕಾರ ದಂತಹ ಕೃತಿಯನ್ನು ಚಿತ್ರೀಕರಿಸುವುದರಲ್ಲಿ ಕಾರಣಕರ್ತ ರಾಗಿ ತಮ್ಮ ನಿಲುವಿಗೆ ಸಾಕ್ಷಿಯನ್ನೊದಗಿಸಿದ್ದಾರೆ.

ಗೋಪಾಲಗೌಡರ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ಅವರು ಕ್ರಾಂತಿಕಾರ ಮನೋಧರ್ಮವನ್ನು ಹೊಂದಿದ್ದರೆಂಬುದು ಸ್ಪಷ್ಟವಾದಂತಾಯಿತು. ಅವರು ವಿಧಾನ ಸಭಾಧಿವೇಶನದಲ್ಲಿ ಮಾಡುತ್ತಿದ್ದ ಭಾಷಣಗಳು ಅನೇಕ ವಿಚಾರ ಕ್ರಾಂತಿಯನ್ನು ಒಳಗೊಂಡಿರುತ್ತಿದ್ದವು.

ಪೋಸ್ಟ್ ಕೃಪೆ : ಗೂಗಲ್ ಸರ್ಚ್
ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here